ಬಹಿಷ್ಕಾರದ ನಡುವೆ ಶಾಂತಿಯುತ ಮತದಾನ
ಚಿತ್ರದುರ್ಗ : ಪರಿಶಿಷ್ಟ ಜಾತಿ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಶೇ.೪೮.೦೯ ರಷ್ಟು ಮತದಾನವಾಗಿದೆ. ಕೆಲ ಕಡೆ ಮತದಾನ ಬಹಿಷ್ಕಾರ, ಸಣ್ಣಪುಟ್ಟ ಗೊಂದಲ ಹೊರತು ಪಡಿಸಿದರೆ ಬಹುತೇಕ ಶಾಂತಿಯುತವಾಗಿತ್ತು.
ಪಾವಗಡದಲ್ಲಿ ಅತಿ ಹೆಚ್ಚು ಶೇ.೫೫ ಮತದಾನವಾಗಿದ್ದರೆ, ಹೊಸದುರ್ಗ ಅತ್ಯಂತ ಕಡಿಮೆ ಪ್ರಮಾಣ ಅಂದರೆ ಶೇ.೩೫ ರಷ್ಟಾಗಿದೆ.
ಬೆಳಗ್ಗೆ ೭ ಕ್ಕೆ ಆರಂಭವಾದ ಮತದಾನ ಸಂಜೆ ೫ ರವರೆಗೂ ನೀರಸವಾಗಿತ್ತು. ಕೇವಲ ಪಟ್ಟಣ, ನಗರ ಪ್ರದೇಶಗಳಲ್ಲದೆ ಗ್ರಾಮೀಣ ಭಾಗದಲ್ಲೂ ಮತದಾರರು ಮತಗಟ್ಟೆಗೆ ಬರುವ ಉತ್ಸಾಹ ತೋರಲಿಲ್ಲ.
ಹಿರಿಯೂರು ತಾಲೂಕಿನ ಶೇಷಪ್ಪನಹಳ್ಳಿಯಲ್ಲಿ ರಸ್ತೆ, ಆಸ್ಪತ್ರೆ ಸೇರಿದಂತೆ ಮೂಲ ಸೌಕರ್ಯವಿಲ್ಲ ಎಂದು ಮತದಾನ ಬಹಿಷ್ಕರಿಸಿದರು. ಈ ಗ್ರಾಮದಲ್ಲಿ ೭೩೬ ಮತದಾರರಿದ್ದಾರೆ. ಕೃಷಿ, ಕುರಿ ಸಾಕಣೆ ಇಲ್ಲಿನ ಜನರ ಮುಖ್ಯ ಕಸುಬಾಗಿದೆ.
ಹೊಳಲ್ಕೆರೆ ತಾಲೂಕಿನ ಅರಬಗಟ್ಟದ ಗ್ರಾಮಸ್ಥರು ಮೂಲ ಸೌಕರ್ಯಕ್ಕೆ ಆಗ್ರಹಿಸಿ ಕೆಲ ಹೊತ್ತು ಮತದಾನ ಬಹಿಷ್ಕರಿಸಿದ್ದರು. ಅಕಾರಿಗಳು ಮತ್ತು ಗ್ರಾಮದ ಮುಖಂಡರು ಮನವೊಲಿಸಿದ ನಂತರ ಮಧ್ಯಾಹ್ನ ೧೨ ಗಂಟೆ ವೇಳೆಗೆ ಮತದಾನದತ್ತ ಮನಸ್ಸು ಮಾಡಿದರು.
ಇದೇ ತಾಲೂಕಿನ ತಿರುಮಲಾಪುರದಲ್ಲಿ ಮತಯಂತ್ರ ದೋಷದಿಂದ ಮತದಾನ ತಡವಾಗಿ ೧೧.೩೦ ಕ್ಕೆ ಆರಂಭವಾಯಿತು. ಅಂಜನಾಪುರದಲ್ಲಿ ದೇವಸ್ಥಾನದ ಹೆಸರಿನಲ್ಲಿ ಹಣ ವಸೂಲಿ ಗದ್ದಲದಿಂದಾಗಿ ೧೧ಗಂಟೆವರೆಗೂ ಮತದಾನ ನಡೆಯಲಿಲ್ಲ.
ಗೊಂದಲ
ಚಿತ್ರದುರ್ಗ ತಾಲೂಕಿನ ಹಳೇ ದ್ಯಾಮವ್ವನಹಳ್ಳಿಯಲ್ಲಿ ಮತದಾರರು ಚುನಾವಣಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಚುನಾವಣಾಕಾರಿ ಬಿಸ್ವಾಸ್ ಭೇಟಿ ನೀಡಿದರು. ಪ್ರಕರಣಕ್ಕೆ ಸಂಬಂಸಿದಂತೆ ಐವರ ವಿರುದ್ಧ ದೂರು ದಾಖಲಿಸಲಾಗಿದೆ.
ಸುಮಾರು ೨೦ ಮತದಾರರ ಗುಂಪು ನಾವು ಜೆಡಿಎಸ್ಗೆ ಮತ ಚಲಾಯಿಸುತ್ತೇವೆ ಎಂದು ಮತಗಟ್ಟೆಗೆ ನುಗ್ಗಿದರು. ನೀವು ಯಾವುದಕ್ಕಾದರೂ ಮತ ಹಾಕಿ, ಆದರೆ ಸಾಲಿನಲ್ಲಿ ಬನ್ನಿ ಎಂದಾಗ ಮತದಾರರು ಗಲಾಟೆ ನಡೆಸಿದರು ಎಂದು ಚುನಾವಣಾ ಸಿಬ್ಬಂದಿ ಹೇಳಿದರು. ಅಕಾರಿಗಳು ಬಿಜೆಪಿಗೆ ಮತ ಹಾಕುವಂತೆ ಹೇಳುತ್ತಿದ್ದರು. ಅದನ್ನು ಪ್ರಶ್ನಿಸಿದೆವು ಎಂದು ಮತದಾರರು ಹೇಳುತ್ತಾರೆ.
ಇಲ್ಲಿಗೆ ಭೇಟಿ ನೀಡಿದ ಶಾಸಕ ಎಸ್.ಕೆ.ಬಸವರಾಜನ್, ಜೆಡಿಎಸ್ ಅಭ್ಯರ್ಥಿ ರತ್ನಾಕರ, ಜಿಲ್ಲಾಕಾರಿ ಬಿಸ್ವಾಸ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಪಾವಗಡ ವಿಧಾನಸಭೆ ಕ್ಷೇತ್ರದ ದೊಡ್ಡಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡ್ಡರಹಟ್ಟಿಯಲ್ಲಿ ಮತದಾನ ಕೇಂದ್ರ ಸ್ಥಳಾಂತರ ವಿರೋಸಿ ಗ್ರಾಮಸ್ಥರು ಮಧ್ಯಾಹ್ನ ೧೨ ರವರೆಗೆ ಮತದಾನ ಬಹಿಷ್ಕರಿಸಿದ್ದರು. ಇಲ್ಲಿನ ಮತ ಕೇಂದ್ರವನ್ನು ದೊಡ್ಡಹಟ್ಟಿಗೆ ಸ್ಥಳಾಂತರಿಸಲಾಗಿತ್ತು.
ಮತಪಟ್ಟಿ ಗೊಂದಲ
ಮತಪಟ್ಟಿ ಗೊಂದಲ ಈ ಚುನಾವಣೆಯಲ್ಲೂ ರಿಪೀಟ್ ಆಗಿದೆ. ಗುರುತಿನ ಚೀಟಿ ಇದ್ದರೂ ಮತಪಟ್ಟಿಯಲ್ಲಿ ಹೆಸರಿಲ್ಲದೆ ಕೆಲ ಮತದಾರರು ಪವಿತ್ರ ಕರ್ತವ್ಯದಿಂದ ವಂಚಿತರಾಗಬೇಕಾಯಿತು. ಚಿತ್ರದುರ್ಗ, ಹೊಳಲ್ಕೆರೆ, ಹಿರಿಯೂರು ತಾಲೂಕುಗಳು ಇಂಥ ಗೊಂದಲಕ್ಕೆ ಸಾಕ್ಷಿಯಾದವು. ಹಿರಿಯೂರಿನ ನೆಹರು ಮೈದಾನ ಮತಗಟ್ಟೆಯಲ್ಲಿ ಮುಸ್ಲಿಂ ಮಹಿಳೆ ಮೋಹಿಸಿನ್ ತಾಜ್ನ ಪೋಟೋ ಇದೆ. ಆದರೆ ಹೆಸರು ಗೌರಮ್ಮ ಎಂದಾಗಿತ್ತು. ಇಂತಹ ದೋಷಗಳಿಗೆ ಕೊರತೆಯಿರಲಿಲ್ಲ. ಇನ್ನು ಕೆಲವೆಡೆ ಏಜೆಂಟರ ಕೈಯಲ್ಲಿದ್ದ ಪಟ್ಟಿಯಲ್ಲಿ ಮತದಾರರ ಹೆಸರಿದ್ದರೆ, ಸಿಬ್ಬಂದಿ ಬಳಿ ಇದ್ದ ಪಟ್ಟಿಯಲ್ಲಿ ಹೆಸರಿಲ್ಲದೆ ಗೊಂದಲ ಸೃಷ್ಟಿಯಾಯಿತು.
ಹೊಸದುರ್ಗ ತಾಲೂಕಿನ ಮೂಡಲಹಟ್ಟಿಯಲ್ಲಿ ಬಹುತೇಕ ಮತದಾರರ ಬಳಿ ಗುರುತಿನ ಚೀಟಿ ಇಲ್ಲದ ಕಾರಣ ಮತದಾನಕ್ಕೆ ಅವಕಾಶ ನೀಡಿರಲಿಲ್ಲ. ಆದರೆ ಅಲ್ಲಿಗೆ ಭೇಟಿ ನೀಡಿದ್ದ ಸಚಿವ ಗೂಳಿಹಟ್ಟಿ ಶೇಖರ್ ಕ್ಷೇತ್ರ ಚುನಾವಣಾಕಾರಿಯೊಂದಿಗೆ ಚರ್ಚಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
ವಿಧಾನಸಭೆ ಕ್ಷೇತ್ರ ವ್ಯಾಪ್ತಿ ಶೇಕಡವಾರು ಮತದಾನ
ಪಾವಗಡ ಶೇ.೫೫
ಹೊಳಲ್ಕೆರೆ ಶೇ.೫೫
ಮೊಳಕಾಲ್ಮುರು ಶೇ.೫೧
ಶಿರಾ ಶೇ.೫೦
ಚಿತ್ರದುರ್ಗ ಶೇ.೪೮
ಹಿರಿಯೂರು ಶೇ.೪೮
ಚಳ್ಳಕೆರೆ ಶೇ.೪೨.೭೦
ಹೊಸದುರ್ಗ ಶೇ.೩೫
ಎಲ್ಲ ಪಕ್ಷಗಳ ಕಣ್ಣು 'ಎಡಗೈ' ಮೇಲೆ
ಶಿವರಾಜ್ ಬೀದಿಮನಿ
ಚಿತ್ರದುರ್ಗ : ನಿರೀಕ್ಷಿಸಿದಂತೆ ಕಾಂಗ್ರೆಸ್ ಚಿತ್ರದುರ್ಗ ಮೀಸಲು ಕ್ಷೇತ್ರದಲ್ಲಿ ಎಡಗೈ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಘೋಷಿಸಿದೆ. ಈಗಾಗಲೇ ಜೆಡಿಎಸ್, ಬಿಎಸ್ಪಿ ಮಾದಿಗ ಸಮುದಾಯದವರಿಗೇ ಟಿಕೆಟ್ ಘೋಷಿಸಿವೆ. ಕಾಂಗ್ರೆಸ್ ಕೂಡ ಇದೇ ಸಮುದಾಯಕ್ಕೆ ಜೋತು ಬಿದ್ದಿರುವುದು ಅಚ್ಚರಿ ತಂದಿದೆ.
ಇದು ಕಾಂಗ್ರೆಸ್ನ ಭದ್ರಕೋಟೆ. ಪಕ್ಷದ ಸಂಸದರನ್ನು ೯ಬಾರಿ ಆಯ್ಕೆ ಮಾಡಿ ಕಳುಹಿಸಿದ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಈ ಸಲ ಎಡವಿದೆ. ಕಣದಲ್ಲಿರುವ ಪ್ರಮುಖ ಪಕ್ಷಗಳ ಮೂವರು ಮಾದಿಗ ಸಮುದಾಯಕ್ಕೆ ಸೇರಿದ್ದು, ಒಂದೂವರೆ ಲಕ್ಷ ಮತಗಳ ಮೇಲೆ ಮೂರೂ ಪಕ್ಷಗಳು ಕಣ್ಣಿಟ್ಟಿವೆ. ಈ ಬಾರಿ ಹೈಕಮಾಂಡ್ ಎಡಗೈಗೆ ಸೇರಿದ ಡಾ.ಬಿ.ತಿಪ್ಪೇಸ್ವಾಮಿಗೆ ಟಿಕೆಟ್ ಪ್ರಕಟಿಸಿದೆ. ಪರಿಶಿಷ್ಟ ಜಾತಿಯ ಇತರೆ ಸಮುದಾಯಗಳಾದ ಲಂಬಾಣಿ, ಆದಿ ದ್ರಾವಿಡ (ಬಲಗೈ ) ಸಾಮಾಜಿಕ ನ್ಯಾಯದಿಂದ ವಂಚಿತವಾದಂತಾಗಿದೆ. ಈ ಸಮುದಾಯಗಳ ಮತಗಳು ಯಾವ ಪಕ್ಷಗಳ ಪಾಲಾಗುತ್ತವೆ ಎನ್ನುವುದು ಮುಂದಿನ ಪ್ರಶ್ನೆ.
ಸಾಮಾನ್ಯ ಕ್ಷೇತ್ರದಿಂದ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿರುವ ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತದಾರರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಹೀಗಾಗಿ ಜಾತಿ ಲೆಕ್ಕಾಚಾರದಲ್ಲಿ ಮತ ಗಿಟ್ಟಿಸಿಕೊಳ್ಳಲು ಪಕ್ಷಗಳು ನಾನಾ ಸವಾಲು ಎದುರಿಸಬೇಕಿದೆ.
ಚುನಾವಣಾ ಕಣದಲ್ಲಿರುವ ಬಿಎಸ್ಪಿ ಯ ಎಂ.ಜಯಣ್ಣ, ಜೆಡಿಎಸ್ನ ರತ್ನಾಕರ್ ಬಾಬು, ಕಾಂಗ್ರೆಸ್ನ ಡಾ.ಬಿ.ತಿಪ್ಪೇಸ್ವಾಮಿ (ಮಾದಿಗ ) ಒಂದೇ ಸಮುದಾಯಕ್ಕೆ ಸೇರಿದವರು. ಸಹಜವಾಗಿ ಈ ಮತಗಳು ಮೂರೂ ಪಕ್ಷಗಳಿಗೆ ಹರಿದು ಹಂಚಲಿವೆ.
ಇನ್ನು ಭೋವಿ ಸಮುದಾಯದ ಬಿಜೆಪಿಯ ಜನಾರ್ದನಸ್ವಾಮಿ, ತಮ್ಮ ಸಮುದಾಯದ ಮತ ಸೆಳೆಯುವಲ್ಲಿ ಸಂದೇಹವಿಲ್ಲ. ಆದರೆ, ಲಂಬಾಣಿ, ಆದಿ ದ್ರಾವಿಡರಿಗೆ ಬಿಎಸ್ಪಿ, ಕಾಂಗ್ರೆಸ್, ಜೆಡಿಎಸ್ ಮಣೆ ಹಾಕದ ಕಾರಣ ಕಮಲ ಅರಳಿ ಬರಲು ದಾರಿ ಸುಗಮವಾಯಿತೇ ?
ರಾಜ್ಯದ ೨೮ ಕ್ಷೇತ್ರಗಳಲ್ಲಿ ಐದು ಮೀಸಲು ಕ್ಷೇತ್ರಗಳಿವೆ. ಇದರಲ್ಲಿ ಮೂರು ಬಲಗೈ ಸಮುದಾಯಕ್ಕೆ, ಉಳಿದೆರಡು ಎಡಗೈ ಆಕಾಂಕ್ಷಿಗಳಿಗೆ ನೀಡಲು ಕಾಂಗ್ರೆಸ್ ಲೆಕ್ಕ ಹಾಕಿತ್ತು. ಅದರಂತೆ ಚಿತ್ರರ್ದುಗದಿಂದ ಡಾ.ತಿಪ್ಪೇಸ್ವಾಮಿ, ಕೋಲಾರದಿಂದ ಕೇಂದ್ರ ಸಚಿವ ಕೆ.ಎಚ್.ಮನಿಯಪ್ಪ ಹೆಸರು ಪ್ರಕಟಿಸಿದೆ.
ಚಿತ್ರದುರ್ಗದಿಂದ ಬಲಗೈ ಸಮುದಾಯದ ಡಾ.ಪರಮೇಶ್ವರ, ಎಡಗೈ ಸಮುದಾಯದ ಡಾ.ತಿಪ್ಪೇಸ್ವಾಮಿ ಹೆಸರು ಕೇಳಿ ಬಂದಿದ್ದವು. ಸಮರ್ಥ ಅಭ್ಯರ್ಥಿಗಾಗಿ ತಡಕಾಡಿ ಕೊನೆಗೂ ಯುಗಾದಿ ಮರು ದಿನ ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟಿಸಿದೆ. ರಾಜ್ಯದಲ್ಲೊಬ್ಬರಿಗೆ ಯುವ ಕೋಟಾದಡಿ ಪಕ್ಷದ ಟಿಕೆಟ್ ನೀಡಬೇಕು ಎನ್ನುವುದು ಕಾಂಗ್ರೆಸ್ ಮಾನದಂಡವಾಗಿತ್ತು.ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ತಿಪ್ಪೇಸ್ವಾಮಿಗೆ ಟಿಕೆಟ್ ಲಭಿಸಿದೆ. ಡಾ.ತಿಪ್ಪೇಸ್ವಾಮಿ, ಜನಾರ್ದನಸ್ವಾಮಿ, ರತ್ನಾಕರ್ ಬಾಬು ಕ್ಷೇತ್ರಕ್ಕೆ ಹೊಸ ಮುಖಗಳು. ಇವರು ವೈಯಕ್ತಿಕ ವರ್ಚಸ್ಸಿಗಿಂತ ಪಕ್ಷಗಳ ಮುಖವಾಣಿ ಮೂಲಕವೇ ಮತದಾರನನ್ನು ಎದುರುಗೊಳ್ಳಬೇಕಿದೆ.
ಗುಲಾಂನಬಿಗೆ ಕರುಣಾಕರ ರೆಡ್ಡಿ ತಿರುಗೇಟು
ಸರಕಾರ ಉರುಳಿಸುವ ತಾಕತ್ತು ಕಾಂಗ್ರೆಸ್ಗಿಲ್ಲ
ದಾವಣಗೆರೆ: ಜನಮನ್ನಣೆ ಪಡೆದ ಸರಕಾರ ಉರುಳಿಸುವ ತಾಕತ್ತು ಕಾಂಗ್ರೆಸ್ಗಿಲ್ಲ ಎಂದು ರಾಜ್ಯ ಕಂದಾಯ ಸಚಿವ ಕರುಣಾಕರ ರೆಡ್ಡಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜೆಡಿಎಸ್ ಮುಖಂಡ ನಾಗರಾಜ್ ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದರು.
ಕರ್ನಾಟಕದಿಂದ ಅತಿ ಹೆಚ್ಚು ಸಂಸದರನ್ನು ಲೋಕಸಭೆಗೆ ಕಳುಹಿಸಿದರೆ ವರ್ಷದೊಳಗೆ ಬಿಜೆಪಿ ಸರಕಾರ ಪತನ ಮಾಡುವ ಗುಲಾಂ ನಬಿ ಹೇಳಿಕೆ ಹುಚ್ಚುತನದಿಂದ ಕೂಡಿದೆ. ಈ ಹೇಳಿಕೆ ಗಮನಿಸಿದರೆ ಕಾಂಗ್ರೆಸ್ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವೆಂಬುದು ಸಾಬೀತಾಗಿದೆ ಎಂದು ಲೇವಡಿ ಮಾಡಿದರು.
ಜನಮತ ಪಡೆದ ಸರಕಾರದ ಪತನಕ್ಕೆ ಪ್ರಯತ್ನಿಸುವುದು ಸುಲಭವಲ್ಲ. ಹಾಗೆ ಮಾಡಲು ಬಿಜೆಪಿ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದೆ ಎಂಬ ನೈತಿಕತೆಯಿಂ ದ ಕಾಂಗ್ರೆಸ್ ಹೆಚ್ಚು ಸಂಖ್ಯೆಯ ಸಂಸದರನ್ನು ಗೆಲ್ಲಿಸಿ ಕೊಡುವಂತೆ ಕೇಳುತ್ತಿದೆ ಎಂದು ಪ್ರಶ್ನಿಸಿದ ರೆಡ್ಡಿ, ರೈಲ್ವೆಯಲ್ಲಿ ರಾಜ್ಯಕ್ಕಾದ ಅನ್ಯಾಯ ಅಷ್ಟಿಷ್ಟಲ್ಲ. ಬಿಹಾರ, ತಮಿಳುನಾಡಿಗೆ ಆದ್ಯತೆ ನೀಡಿ ನಮ್ಮನ್ನು ಕಡೆಗಣಿಸಲಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಕಿತ್ತೊಗೆಯಿರಿ ಎಂದು ಹೇಳುವ ಸಿದ್ದರಾಮಯ್ಯ ಇದನ್ನೇನು ಗೊಂಬೆ ಆಟ ಎಂದು ತಿಳಿದಿದ್ದಾರೆಯೇ ಎಂದು ವ್ಯಂಗ್ಯವಾಡಿದರು.
ಬಸವಣ್ಣನ ಬಗ್ಗೆ ಏನೂ ತಿಳಿಯದ ಸೋನಿಯಾ ಗಾಂ ಕಾಂಗ್ರೆಸ್ ಸಮಾವೇಶದಲ್ಲಿ ಬಸವಣ್ಣನ ಬಗ್ಗೆ ಮಾತನಾಡಿದ್ದಾರೆ. ಯಾರೋ ಬರೆದುಕೊಟ್ಟ ಭಾಷಣ ಓದಿರಬೇಕು ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಟೀಕಿಸಿದರು.
ದೇಶಕ್ಕೆ ಬಲಿದಾನ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರೇ ಭಾರತ ವಿಭಜನೆಗೆ ಹಾಗೂ ಕಾಶ್ಮೀರ ಸಮಸ್ಯೆಗೆ ಕಾರಣ ಎಂದರು.
ಸಂಸದ ಜಿ.ಎಂ.ಸಿದ್ದೇಶ್ ಮಾತನಾಡಿ, ಕಾಂಗ್ರೆಸ್ ವಂಶಪಾರಂಪರಿಕ ಆಡಳಿತ ನಡೆಸುತ್ತ ಬಂದಿದೆ. ಯೋಜನೆಗಳಿಗೆ ಕೂಡ ಕುಟುಂಬ ಸದಸ್ಯರ ಹೆಸರಿಟ್ಟಿದೆ. ಜವಾಹರ್ ರೋಜಗಾರ್, ಇಂದಿರಾ ಆವಾಸ್, ರಾಜೀವ್ ಗಾಂ ಸಬ್ಮಿಷನ್ ಯೋಜನೆಗಳೆಲ್ಲ ಇದಕ್ಕೆ ಸ್ಪಷ್ಟ ಸಾಕ್ಷಿ ಎಂದು ಹೇಳಿದರು.
ರಾಜ್ಯ ಕೃಷಿ ಸಚಿವ ಎಸ್.ಎ.ರವೀಂದ್ರನಾಥ್, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಶಾಸಕರಾದ ಬಿ.ಪಿ.ಹರೀಶ್,ಎಂ.ಪಿ.ರೇಣುಕಾಚಾರ್ಯ, ಬಸವರಾಜ್ ನಾಯ್ಕ್ ಹಾಗೂ ಎಚ್.ಎಸ್.ನಾಗರಾಜ್, ಯಶವಂತ ರಾವ್, ಉಮಾ ಪ್ರಕಾಶ್, ಬಿ.ಲೋಕೇಶ್, ಶಿವಕುಮಾರ್ ಇತರರು ಹಾಜರಿದ್ದರು.
ಅಸಭ್ಯ ವರ್ತನೆ : ಪ್ರಾಚಾರ್ಯ ಅಮಾನತು
ಚಿತ್ರದುರ್ಗ : ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ವಿಶೇಷ ಜಾಗೃತ ದಳದ ಸದಸ್ಯರ ಜತೆ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಪಾದನೆ ಮೇರೆಗೆ ಹಿರಿಯೂರಿನ ಗಿರೀಶ ಬಾಲಕಿಯರ ಪಿಯು ಕಾಲೇಜಿನ ಪ್ರಾಚಾರ್ಯರನ್ನು ಅಮಾನತುಗೊಳಿಸಲಾಗಿದೆ.
ಶನಿವಾರ ರಾಜ್ಯಶಾಸ್ತ್ರ ವಿಷಯದ ಪರೀಕ್ಷೆಯಲ್ಲಿ ನಕಲು ತಡೆಯುವ ಸಲುವಾಗಿ ಮಹಿಳಾ ಮೇಲ್ವಿಚಾರಕರನ್ನು ನೇಮಿಸಿಕೊಳ್ಳುವಂತೆ ಪ್ರಾಚಾರ್ಯರಿಗೆ ಸೂಚಿಸಲಾಯಿತು.ಆಗ ವಿನಾಕಾರಣ ಸಿಟ್ಟಿಗೆದ್ದ ಅವರು ಜಾಗೃತ ದಳದವರ ಜತೆ ಅಸಭ್ಯವಾಗಿ ವರ್ತಿಸಿದರು ಎನ್ನಲಾಗಿದೆ.
ಈ ಬಗ್ಗೆ ಜಾಗೃತ ದಳದ ಸದಸ್ಯರು ನೀಡಿದ ದೂರಿನನ್ವಯ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತರು ಈ ಕ್ರಮ ಕೈಗೊಂಡಿದ್ದಾರೆ ಎಂದು ಉಪನಿರ್ದೇಶಕ ರವೀಂದ್ರ ಕೊಣ್ಣೂರು ತಿಳಿಸಿದ್ದಾರೆ.
ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ವಿಜೇತರು
ಚಿತ್ರದುರ್ಗ: ನಗರದಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಂಗಳೂರು ಆರ್ಮಿ ಸ್ಪೋರ್ಟ್ಸ್ ಸೆಂಟರ್ನ ದಿನೇಶ್ ಕುಮಾರ್ ‘ಮಿಸ್ಟರ್ ಕರ್ನಾಟಕ-೨೦೦೯’, ಪ್ರತಾಪ್ ಚಂದ್ರನ್ ‘ಬೆಸ್ಟ್ ಪೋಜರ್ ’ಆಗಿ ಹೊರ ಹೊಮ್ಮಿದ್ದಾರೆ.
ಇತರೆ ವಿಭಾಗಗಳಲ್ಲಿ ಬಹುಮಾನ ಪಡೆದವರ ವಿವರ ಇಂತಿದೆ.
೫೫ ಕೆ.ಜಿ.ವಿಭಾಗ-ಬೆಳಗಾವಿಯ ಪ್ರಮೋದ್ ಪೂಣಾಚೆ (ಪ್ರಥಮ), ಬೆಂಗಳೂರಿನ ಬಿ.ಪಳನ (ದ್ವಿತೀಯ), ದಾವಣಗೆರೆಯ ರಫೀಕ್ (ತೃತೀಯ).
೬೦ ಕೆ.ಜಿ.ವಿಭಾಗ-ಧಾರವಾಡದ ಸಿದ್ಧು ಜಲಗಾರ್ (ಪ್ರಥಮ), ಚಿತ್ರದುರ್ಗ ಅಣ್ಣಪ್ಪ (ದ್ವಿತೀಯ), ಬೆಂಗಳೂರಿನ ನಾರಾಯಣಸ್ವಾಮಿ (ತೃತೀಯ).
೬೫ ಕೆ.ಜಿ.ವಿಭಾಗ-ಬೆಂಗಳೂರಿನ ದಿನೇಶ್ ಕುಮಾರ್ (ಪ್ರಥಮ), ಧಾರವಾಡದ ಬಿ.ಶರತ್ ತಾಪಾ (ದ್ವಿತೀಯ), ದಾವಣಗೆರೆಯ ಈರಣ್ಣ (ತೃತೀಯ).
೭೦ ಕೆ.ಜಿ.ವಿಭಾಗ-ಬೆಂಗಳೂರಿನ ಸೇಲವನ್ (ಪ್ರಥಮ), ಬೆಳಗಾಂನ ಅಮರ ಪಾಟೀಲ (ದ್ವಿತೀಯ), ಎಚ್.ರಾಜಕುಮಾರ್ (ಬೆಳಗಾವಿ).
೭೫ ಕೆ.ಜಿ.ವಿಭಾಗ-ಬೆಂಗಳೂರಿನ ಪ್ರತಾಪ್ ಚಂದ್ರನ್ (ಪ್ರಥಮ), ಬೆಳಗಾಂನ ಅಮಿತ್ (ದ್ವಿತೀಯ), ಬೆಂಗಳೂರಿನ ಜಗನ್ (ತೃತೀಯ).
೮೦ ಕೆ.ಜಿ.ವಿಭಾಗ-ಬೆಂಗಳೂರಿನ ಅಲೆಕ್ಸ್ ಕುರಿಯನ್ (ಪ್ರಥಮ), ಬೆಂಗಳೂರಿನ ಪ್ರಕಾಶ್ (ದ್ವಿತೀಯ), ಬೆಳಗಾವಿಯ ಸಂದೀಪ್ ಪಾಟೀಲ್(ತೃತೀಯ).
ಪ್ಲಸ್ ೮೫ ಕೆ.ಜಿ.ವಿಭಾಗ-ಬೆಳಗಾವಿಯ ಪ್ರೀತಮ್ ಚೌಗಲೆ (ಪ್ರಥಮ), ಮಂಗಳೂರಿನ ನವೀನ್ ಪೂಜಾರಿ (ದ್ವಿತೀಯ), ಬೆಳಗಾವಿ ಸಚಿನ್ (ತೃತೀಯ).
೪೦ ವರ್ಷ - ೭೦ ಕೆ.ಜಿ.ವಿಭಾಗ-ಗದಗ್ನ ವಾಸುದೇವ್ (ಪ್ರಥಮ), ಧಾರವಾಡ ಅರವಿಂದ್ (ದ್ವಿತೀಯ).
೭೫ ಕೆ.ಜಿ.ವಿಭಾಗ-ಬೆಂಗಳೂರು ವಿಠಲ್ದಾಸ್ ನಾಯ್ಕ (ಪ್ರಥಮ), ಶಿವಮೊಗ್ಗ ಪರಮೇಶ್ (ದ್ವಿತೀಯ), ಗಿಲ್ ಬರ್ಟ್ ಡೈಯಾಸ್ (ತೃತೀಯ).
೫೦ ವರ್ಷ - ೮೦ ಕೆ.ಜಿ.ವಿಭಾಗ-ಮಂಗಳೂರು ರವಿಕುಮಾರ್ (ಪ್ರಥಮ), ಶಿವಮೊಗ್ಗ ಪಾಂಡುರಂಗ (ದ್ವಿತೀಯ), ಶಿವಮೊಗ್ಗ ನಂಜುಂಡೇಗೌಡ (ತೃತೀಯ).
ವಿಕಲಚೇತನರ ೮೦ ಕೆ.ಜಿ.ವಿಭಾಗ-ಬೆಂಗಳೂರಿನ ಸೈಯದ್ ಇಬಾದತ್ (ಪ್ರಥಮ), ಬಂಗಾರಪ್ಪ (ದ್ವಿತೀಯ), ವೆಂಕಟೇಶ್ (ತೃತೀಯ).
'ಹಲೋ ವಿಕ' ಫೋನ್ ಇನ್ / ಅಗ್ನಿ ಆಕಸ್ಮಿಕಗಳಿಗೆ ಕಡಿವಾಣ
Posted by Da.Ko.Halli Chandrashekaraಚಿತ್ರದುರ್ಗ: ಬೇಸಿಗೆಯ ದಿನಗಳು ಅಗ್ನಿಶಾಮಕ ಸಿಬ್ಬಂದಿ ಹಾಗೂ ಜನರಿಗೆ ಅಗ್ನಿ ಪರೀಕ್ಷೆಯ ಸಮಯ. ಆಗ ಅಗ್ನಿಯ ರುದ್ರ ನರ್ತನ ತಡೆಯಲು ಮುಂದಾಗದಿದ್ದರೆ ಭರಿಸಲಾಗದ ಹಾನಿ ಖಚಿತ. ಈ ಕುರಿತು ಅರಿವು ಮೂಡಿಸುವಲ್ಲಿ ಶುಕ್ರವಾರ ‘ಹಲೋ ವಿಕ ’ ಫೋನ್ ಇನ್ ಮೂಲಕ ವಿಜಯ ಕರ್ನಾಟಕ ವೇದಿಕೆಯಾಯಿತು.
ಟಿವಿ ವಾಹಿನಿಗಳು ಹಾಗೂ ಆಕಾಶವಾಣಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರಿಗೆ ತಮ್ಮ ನೆಚ್ಚಿನ ಪತ್ರಿಕೆ ಅಂಥ ಸದವಕಾಶ ಒದಗಿಸಿಕೊಟ್ಟದ್ದು, ಮನೆ ಬಾಗಿಲಿಗೇ ಪರಿಹಾರ ತೆಗೆದುಕೊಂಡು ಹೋದಂತಾಗಿತ್ತು. ಬೆಳಗ್ಗೆ ೧೦ ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಎಡೆಬಿಡದೆ ದಾವಣಗೆರೆ ಹಾಗೂ ಚಿತ್ರದುರ್ಗ ಓದುಗರು ಅಗ್ನಿ ಪರೀಕ್ಷೆಗೆ ಒಳಪಟ್ಟು ಜ್ಞಾನೋದಯ ಮಾಡಿಕೊಂಡರು.
ಅಗ್ನಿ ಅನಾಹುತ ಸಂಭವಿಸಿದಾಗ ನಡೆದುಕೊಳ್ಳಬೇಕಾದ ರೀತಿ ಹಾಗೂ ಅದಕ್ಕೂ ಮೊದಲೇ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆ ದಾವಣಗೆರೆ ಪ್ರಾದೇಶಿಕ ಅಗ್ನಿಶಾಮಕ ಅಕಾರಿ ವೈ.ಎ.ಕೌಸರ್ ತಿಳಿವಳಿಕೆ ನೀಡಿದರು. ಜತೆಯಲ್ಲಿ ಕಿರಿಯ ಅಗ್ನಿಶಾಮಕ ಅಕಾರಿ ಶಶಿಧರ್ ಎಸ್.ಎನ್. ಕೂಡ ಹಾಜರಿದ್ದರು. ಅಗ್ನಿ ದುರಂತ ಸಂಭವಿಸಿದಾಗ ಅಗ್ನಿಶಾಮಕ ಸಿಬ್ಬಂದಿ ಕಾರ್ಯವೈಖರಿ, ಜನರ ಸಹಭಾಗಿತ್ವ, ಇಲಾಖೆ ಹಮ್ಮಿಕೊಂಡಿರುವ ಪ್ರಚಾರಾಂದೋಲನ ಮತ್ತಿತರ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.
ತಮ್ಮ ಇಲಾಖೆಯು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಾಗಿ ಹೊಸ ರೂಪ ಪಡೆದ ನಂತರ ಸಮಾಜಕ್ಕೆ ಇನ್ನೂ ಹತ್ತಿರವಾಗಿದೆ ಎಂದ ಕೌಸರ್, ಹೊಸ ಕರ್ತವ್ಯ ಹಾಗೂ ಹೊಣೆಗಾರಿಕೆಗಳನ್ನು ವಿವರಿಸಿದರು.
ಈ ಹಿಂದೆ ಅಗ್ನಿ ದುರಂತಗಳು ಸಂಭವಿಸಿದಾಗ ಮಾತ್ರ ಅಗ್ನಿಶಾಮಕ ಇಲಾಖೆ ಕಾರ್ಯೋನ್ಮುಖವಾಗುತ್ತಿತ್ತು. ಈಗ ನೈಸರ್ಗಿಕ ವಿಕೋಪಗಳು, ಯಾವುದೇ ರೀತಿಯ ಅಪಘಾತಗಳು ಘಟಿಸಿದಾಗಲೂ ಇಲಾಖೆ ತುರ್ತು ಸೇವೆ ಒದಗಿಸಲು ಧಾವಿಸುತ್ತದೆ. ಅಂದರೆ ಯಾವುದೇ ಸಂದರ್ಭವಿರಲಿ, ಜೀವ ಹಾಗೂ ಆಸ್ತಿಪಾಸ್ತಿ ರಕ್ಷಣಾ ಕಾರ್ಯ ಇಲಾಖೆ ಸುರ್ಪದಿಗೆ ಸೇರಿದೆ. ಅದಕ್ಕಾಗಿ ಇಲಾಖೆಗೆ ಅತ್ಯಾಧುನಿಕ ಸಲಕರಣೆ ಹೊಂದಿದ ವಾಹನಗಳನ್ನು ನೀಡಲಾಗಿದೆ. ಹಾಗಾಗಿ ಅಗ್ನಿ ಅನಾಹುತಗಳಲ್ಲದೆ, ಯಾವುದೇ ರೀತಿಯ ಆಕಸ್ಮಿಕಗಳಲ್ಲಿ ಸಾಮಾನ್ಯರು ಕಂಡುಕೊಳ್ಳಲಾಗದ ಪರಿಹಾರಕ್ಕೆ ಇಲಾಖೆಯ ಮೊರೆ ಹೋಗಬಹುದು.
ವರಿಷ್ಠರ ಆಯ್ಕೆಯಲ್ಲೂ ಇದೆ ವರಸೆ
ಮಲ್ಲಿಕಾರ್ಜುನ್ ಕಬ್ಬೂರು
ದಾವಣಗೆರೆ : ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಾಲಿಕೆ ಮೇಯರ್ ಆಯ್ಕೆ ನಡೆಯಬೇಕಿದ್ದು, ಬಿಜೆಪಿ ವರಿಷ್ಠರು ಲಾಭನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ವೇಳೆ ಕಾಂಗ್ರೆಸ್ನ ದಾರಿಯಲ್ಲೇ ಬಿಜೆಪಿ ಹೆಜ್ಜೆಯಿಡಲಿದೆ. ಜಿಲ್ಲಾ ವರಿಷ್ಠರು ಹೇಳಿದ ಅಭ್ಯರ್ಥಿ ಮೇಯರ್- ಉಪ ಮೇಯರ್ ಗದ್ದುಗೆ ಏರುವುದು ಬಹುತೇಕ ಖಚಿತ. ಹೀಗಾಗಿ ಇದನ್ನು ‘ಈಟ್ ಇಸ್ ಸೆಲೆಕ್ಷನ್ - ನಾಟ್ ಎಲೆಕ್ಷನ್’ ಅಂದರೂ ಅಡ್ಡಿಯಿಲ್ಲ.
ಒಟ್ಟು ೪೧ ಸ್ಥಾನಗಳಲ್ಲಿ ೨೪ ಸದಸ್ಯಬಲ ಹೊಂದಿರುವ ಬಿಜೆಪಿ, ಮೇಯರ್ ಮಾದಮ್ಮ ಮುನಿಸ್ವಾಮಿ, ಉಪ ಮೇಯರ್ ಜಯಣ್ಣ ನೇತೃತ್ವದಲ್ಲಿ ಒಂದು ವರ್ಷದ ಆಡಳಿತ ಪೂರೈಸಿದೆ. ಬಿಸಿಎಂ(ಎ) ಮಹಿಳೆ ಮೇಯರ್ ಹಾಗೂ ಉಪಮೇಯರ್ ಸಾಮಾನ್ಯಕ್ಕೆ ಮೀಸಲು ನಿಗದಿಯಾಗಿದ್ದು, ಫೆ.೨೭ ರಂದು ಬೆಳಗ್ಗೆ ೧೦ಕ್ಕೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಚುನಾವಣೆ ನೆಪಮಾತ್ರಕ್ಕೆ ಎಂಬಂತಾಗಲಿದೆ.
ಮೇಯರ್ ಅಭ್ಯರ್ಥಿ ಆಯ್ಕೆ ಲೋಕಸಭೆ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದೆಂಬ ಎಚ್ಚರಿಕೆಯನ್ನು ವರಿಷ್ಠರು ವಹಿಸಿದ್ದಾರೆ. ಈಗ ನಿಗದಿಯಾದ ಮೀಸಲು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಸರಕಾರ ತಮ್ಮದೇ ಆದರೂ ಹಿಂದುಳಿದ ವರ್ಗದ ಮತ ಸೆಳೆಯುವ ದೃಷ್ಟಿಯಿಂದ ಸಾಮಾನ್ಯ ವರ್ಗದ ಬದಲು ಹಿಂದುಳಿದ ವರ್ಗಕ್ಕೆ ಮಣೆ ಹಾಕಲಾಗಿದೆಯೆಂಬ ಅಭಿಪ್ರಾಯ ನಾಗರಿಕರಲ್ಲಿದೆ.
ಈ ಹಿಂದೆ ಪರಿಶಿಷ್ಟ ಜಾತಿ ಮಹಿಳೆಗೆ ಮೇಯರ್ ಹಾಗೂ ಬಿಸಿಎಂ(ಎ) ಸಾಮಾನ್ಯಕ್ಕೆ ಉಪ ಮೇಯರ್ ನಿಗದಿ ಮಾಡಲಾಗಿತ್ತು. ಈಗ ಮತ್ತೊಮ್ಮೆ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗಕ್ಕೆ ನೀಡುವ ಮೂಲಕ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಯತ್ನ ಎದ್ದು ಕಾಣುತ್ತಿದೆ.
ಯಾರು ಹಿತವರು ಈ ನಾಲ್ವರಲಿ:
ಬಿಸಿಎಂ(ಎ) ಮಹಿಳೆಗೆ ಮೇಯರ್ ಸ್ಥಾನ ನಿಗದಿಯಾಗಿದ್ದು, ಬಿಜೆಪಿಯ ಸೌಭಾಗ್ಯ ಮುಕುಂದ, ಸುಶೀಲಮ್ಮ ಮಂಜುನಾಥ್, ಉಮಾ ಪ್ರಕಾಶ್ ಮತ್ತು ನಾಗರತ್ನಮ್ಮನವರಿಗೆ ಅವಕಾಶವಿದೆ. ವರಿಷ್ಠರು ಯಾವ ಸುಳಿವೂ ಬಿಟ್ಟುಕೊಡುವ ಗೋಜಿಗೆ ಹೋಗಿಲ್ಲ.
ಸದ್ಯಕ್ಕೆ ಉಮಾಪ್ರಕಾಶ್, ಸುಶೀಲಮ್ಮ, ಸೌಭಾಗ್ಯ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿವೆ. ಈ ಸದಸ್ಯರು ಹಾಗೂ ಬೆಂಬಲಿಗರು ಕಳೆದ ವಾರದಿಂದ ವರಿಷ್ಠರನ್ನು ಬೆಂಬತ್ತಿತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ಉಪ್ಪಾರ ಜನಾಂಗಕ್ಕೆ ಉಪ ಮೇಯರ್ ಸ್ಥಾನ ನೀಡಿರುವುದರಿಂದ ಉಮಾ ಪ್ರಕಾಶ್ ಬದಲಿಗೆ ಸೌಭಾಗ್ಯ ಅಥವಾ ಸುಶೀಲಮ್ಮಗೆ ಮಣೆ ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ವಿಧಾನಸಭೆ ನಗರ ದಕ್ಷಿಣ ಕ್ಷೇತ್ರದಲ್ಲಿ ಪಕ್ಷ ಬಲ ಪಡಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾದರೆ ಸುಶೀಲಮ್ಮಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚು.
ಉಪ ಮೇಯರ್:
ಸಾಮಾನ್ಯ ಮೀಸಲು ನಿಗದಿಯಾದ ಉಪ ಮೇಯರ್ ಸ್ಥಾನಕ್ಕೆ ೨೩ ಸದಸ್ಯರಿಗೂ ಅವಕಾಶವಿದೆ. ಮುಂದಿನ ವರ್ಷ ಮೇಯರ್ ಸ್ಥಾನ ಸಾಮಾನ್ಯಕ್ಕೆ ಮೀಸಲಾಗುವ ಲೆಕ್ಕಾಚಾರದಲ್ಲಿ ಕೆಲ ಸದಸ್ಯರಿಗೆ ಉಪ ಮೇಯರ್ ಸ್ಥಾನ ಆಕರ್ಷಣೀಯವಾಗಿ ಕಾಣುತ್ತಿಲ್ಲ. ಆದರೂ, ಸ್ಪರ್ಧೆಯಲ್ಲಿ ಆರು ಮಂದಿಯಿದ್ದಾರೆ. ಮಹೇಶ್ ರಾಯಚೂರು, ಅವರಗೆರೆ ಸುರೇಶ್, ರುದ್ರಮುನಿಸ್ವಾಮಿ, ಸಂಕೋಳ್ ಚಂದ್ರಶೇಖರ್, ಜ್ಯೋತಿ ಸಿದ್ದೇಶ್, ಸುಧಾ ಜಯರುದ್ರೇಶ್ ಕಣದಲ್ಲಿದ್ದಾರೆ.
ಬಿ. ಲೋಕೇಶ್, ಶಿವಕುಮಾರ್, ಎಂ.ಜಿ. ಬಕ್ಕೇಶ್ ವರಿಷ್ಠರು ನೀಡುವ ಜವಾಬ್ದಾರಿ ಒಪ್ಪಿಕೊಳ್ಳುವುದಾಗಿ ಹೇಳುತ್ತಿದ್ದಾರೆ.
ಸಮ್ಮೇಳನ ದಿನಗಣನೆ : ಇನ್ನು ೧೧ ದಿನ / ಜ.೧೮,೨೦೦೯
Posted by Da.Ko.Halli Chandrashekaraಸಮ್ಮೇಳನ ದಿನಗಣನೆ : ಇನ್ನು ೧೨ ದಿನ / ಜ.೧೭,೨೦೦೯
Posted by Da.Ko.Halli Chandrashekaraಸಮ್ಮೇಳನ ದಿನಗಣನೆ : ಇನ್ನು ೨೧ ದಿನ / ಜ.೮ ,೨೦೦೯
Posted by Da.Ko.Halli Chandrashekaraಸಮ್ಮೇಳನ ದಿನಗಣನೆ : ಇನ್ನು ೨೨ದಿನ / ಜ.೭,೨೦೦೯
Posted by Da.Ko.Halli Chandrashekaraಸಮ್ಮೇಳನ ದಿನಗಣನೆ : ಇನ್ನು ೨೩ದಿನ / ಜ.೬,೨೦೦೯
Posted by Da.Ko.Halli Chandrashekaraಇವರು ಯಾರಪ್ಪಾ ? ಬೈಸಿಕಲ್ ಕಂಪನಿ ಬ್ರಾಂಡ್ ಅಂಬಾಸಡರಾ? ಗಿಮಿಕ್ ರಾಯನಾ? ಗ್ರಾಫಿಕ್ಸ್ ಕರಾಮತ್ತಾ ? ... ಅಂತೆಲ್ಲಾ ಯೋಚಿಸುತ್ತಿದ್ದೀರಾ?
ಅಯ್ಯೋ, ಯಾರು ಅಂತಾ ಗೊತ್ತಾಗಲಿಲ್ವೆ ಸ್ನೇಹಿತರೆ. ನಮ್ಮ ಪುರೋಹಿತರಲ್ವೆ. ಸದ್ಯಕ್ಕೆ ಪೌರೋಹಿತ್ಯ ಅವರ ಕಸಬಲ್ಲ ಬಿಡಿ.ನಮ್ಮ ನಿಮ್ಮ ಆತ್ಮ ಜಾಗೃತಿಗೆ ಪೌರೋಹಿತ್ಯ ವಹಿಸಿಕೊಂಡಿದ್ದಾರೆ ಅಂದರೆ ಅತಿಶಯೋಕ್ತಿಯೇನಲ್ಲ.
ಅದ್ಹೇಗೆ? ಇದೇನು ಬೈಸಿಕಲ್ ಸಹವಾಸಾ ಅಂತಿದಿರಾ? ನೋಡಿ, ಎಲ್ಲರಿಗೂ ಇರೋ ಹಾಗೆ ಈ ಪುರೋಹಿತರಿಗೂ ವಾಹನ ಖರೀದಿ ಮಾಡೋ ಆಸೆಯಿತ್ತು. ಆದರೆ, ಅವರ ಮನಸ್ಸು ತೆರಳಿದ್ದು ಮಾತ್ರ ಬೈಸಿಕಲ್ ಬಳಿಗೆ. ಅದಕ್ಕೆ ಅವರು ನಮ್ಮ ನಿಮ್ಮೆಲ್ಲರಿಗಿಂತ ಭಿನ್ನವಾಗೇ ಉಳಿಯುತ್ತಾರೆ.
ನಮ್ಮ ಬ್ಯೂರೋದಲ್ಲಿ ಸಮನ್ವಯಕಾರರಾಗಿರುವ ಹರ್ಷ ನ. ಪುರೋಹಿತರು ಸೈಕಲ್ ಖರೀದಿಸಿ ಪೆಟ್ರೋಲ್ ಉಳಿಸವ್ರೆ, ಬರೀ ವೇದಿಕೆಯಲ್ಲಿ ಪರಿಸರದ ಬಗ್ಗೆ ವಕಾಲತ್ತು ವಹಿಸೋರಿಗೆ ಚುರುಕು ಮುಟ್ಟಿಸವರೆ. ಅಷ್ಟೇ ಏಕೆ? ನಮ್ಮನ್ನೂ ಚಿಂತೆಗೆ ಹಚ್ಚವರೆ.
ಇದೆಲ್ಲಾ ಕಥೆ ಬೇಡ. ಡಾಕ್ಟ್ರು ಹೇಳಿರಬೇಕು ‘ನಿಮ್ಮೊಟ್ಟೆ ಕರಗುತ್ತೆ, ಆರೋಗ್ಯ ಸುಧಾರಿಸುತ್ತೆ ಅಂತ ’ ಅದಕ್ಕೆ ಸೈಕಲ್ ತೆಗೆದುಕೊಂಡವರೆ ಅಂತೀರಾ? ಇರ್ಬೋದು. ಏನೇ ಆಗಲಿ, ಪುರೋಹಿತರ ನಡೆಯಂತೂ ಅವರಿಗೆ ಹರ್ಷ ತಂದಿದೆ. ನಿಮಗೆ ? ಪರಿಸರ ಸ್ನೇಹಿ ನಿರ್ಧಾರ ಮಾಡಲು ತಡವೇಕೆ ?
- ಇತಿ ನಿಮ್ಮವ,
ದ.ಕೋ.ಹಳ್ಳಿ ಚಂದ್ರಶೇಖರ
ದ.ಕೋ.ಹಳ್ಳಿ ಚಂದ್ರಶೇಖರ, ವಿಕ ಸುದ್ದಿಲೋಕ
ಚಿತ್ರದುರ್ಗ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಈ ಬಾರಿಯದು ಅಮೃತ ಮಹೋತ್ಸವದ ವರ್ಷ. ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ ನಡೆಯುತ್ತಿರುವುದು ಮತ್ತೊಂದು ಹೆಗ್ಗಳಿಕೆ. ಹಲವು ವಿರೋಧಾಭಾಸಗಳನ್ನು ಮೆಟ್ಟಿ ಸ್ಮರಣೀಯವಾಗಬೇಕಾಗಿರುವುದೇ ಅದರ ಮುಂದಿರುವ ಸವಾಲು.
ಭದ್ರೆಗಾಗಿ ಭಗೀರಥ ಪ್ರಯತ್ನ ನಡೆಸುತ್ತಿರುವ ಜಿಲ್ಲೆಯ ಜನರಿಗೆ ಸಮ್ಮೇಳನದ ಆತಿಥ್ಯ ದೊರೆತಿರುವುದು ಭದ್ರೆ ಹರಿದಷ್ಟೇ ಸಂತಸವಾಗಿದೆ. ಆದರೆ,ಕಾಡಿ ಬೇಡಿ ಸಮ್ಮೇಳನದ ಸಿದ್ಧತೆಯಲ್ಲಿರುವಾಗಲೇ ಪರ್ಯಾಯ ಸಮ್ಮೇಳನದ ಹೊಗೆಯಾಡುತ್ತಿರುವುದು ಕನ್ನಡಾಭಿಮಾನಿಗಳಿಗೆ ನಿರಾಶೆ ಹಾಗೂ ಸಂಘಟಕರನ್ನು ಪೇಚಿಗೆ ಸಿಲುಕಿದೆ. ಇದಕ್ಕೂ ಮೊದಲು ಮೂಲಸೌಕರ್ಯದ ಗರ ಬಡಿದಿತ್ತು.
ಕನ್ನಡ ಸಾಹಿತ್ಯ ಪರಿಷತ್ಗೆ ಈ ವರ್ಷವೇ ಚುನಾವಣೆ ನಡೆದಿದ್ದರಿಂದ ಪರಿಷತ್ನ ಕೇಂದ್ರಾಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಹಾಗೂ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ಗೆ ಸಮ್ಮೇಳನ ಸಂಘಟನೆ ಹೊಸತು. ಹಾಗಾಗಿಯೇ ಈ ಇಬ್ಬರು ಅಧ್ಯಕ್ಷರ ನಿಲುವು ನಿರ್ಧಾರ, ಹೇಳಿಕೆಗಳು ವಿವಾದಕ್ಕೆಡೆ ಮಾಡಿಕೊಟ್ಟಿವೆ. ಕನ್ನಡದ ತೇರು ನಿರ್ವಿಘ್ನವಾಗಿ ಎಳೆಯಲು ತುಸು ಅಡಚಣೆಯಾಗಿದೆ. ಬಗೆಹರಿಸಿಕೊಳ್ಳಲು ಕಾಲ ಮಿಂಚಿಲ್ಲ ಎಂಬುದೇ ಆಶಾದಾಯಕ ಅಂಶ.
ಏನೇ ಆಗಲಿ, ಜನವರಿ ೨೯ ರಿಂದ ನಾಲ್ಕು ದಿವಸ ಸಮ್ಮೇಳನ ನಡೆಯುವುದಂತೂ ಶತಃಸಿದ್ಧ. ಹೇಗೋ ನಡೆಯುತ್ತೆ ಎನ್ನುವುದು ಮುಖ್ಯವಲ್ಲ. ಹೀಗೇ ನಡೆಯಬೇಕು ಎಂದು ಕನ್ನಡಿಗರೆಲ್ಲರೂ ಸಂಕಲ್ಪ ಮಾಡಬೇಕಿದೆ. ಇದೇ ವರ್ಷ ಕನ್ನಡಕ್ಕೆ ಶಾಸ್ತ್ರೀಯ (ರಾಷ್ಟ್ರೀಯ) ಸ್ಥಾನಮಾನ ದೊರೆತಿರುವುದು, ಅಮೃತ ಮಹೋತ್ಸವದ ಸಂಖ್ಯಾಬಲ ಹೊಂದಿರುವುದು, ಬಿಜೆಪಿ ಹೊಸದಾಗಿ ಸರಕಾರ ರಚಿಸಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯದ ಜನತೆ, ಸಾಹಿತ್ಯ ಲೋಕ ಹೊಸ ಭರವಸೆ, ನಿರೀಕ್ಷೆಗಳನ್ನು ಕಟ್ಟಿಕೊಂಡಿದೆ. ಇದರೊಟ್ಟಿಗೆ ಈ ಬಾರಿಯ ಸಮ್ಮೇಳನವನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ನಡೆಸಲು ಪ್ರಯತ್ನ ನಡೆದಿದೆ.
ಕಸಾಪ ರಾಜ್ಯಾಧ್ಯಕ್ಷರ ಆಯ್ಕೆಯಾದ ನಂತರ ಪರಿಷತ್ಗೆ ಸಮಾನಾಂತರವಾಗಿ ಕರ್ನಾಟಕ ಸಾಹಿತ್ಯ ಪರಿಷತ್ ಹುಟ್ಟಿಕೊಂಡು ಚರ್ಚೆಗೆ ಗ್ರಾಸವಾಯಿತು. ಹೊಸ ಸಂಘಟನೆ ಕನ್ನಡ ಸಾಹಿತ್ಯ ಪರಿಷತ್ಗೆ ಪರ್ಯಾಯ, ಪರ್ಯಾಯವಾಗಬಾರದು ಎಂಬುದು ಬಲವಾಗಿ ಚರ್ಚೆಯಾಯಿತು. ಸಮ್ಮೇಳನದ ವಿಷಯದಲ್ಲೂ ಪರ್ಯಾಯ ಗುಮ್ಮ ಸುಳಿದಾಡುತ್ತಿದೆ. ಶೋಷಿತರಿಗೆ ಅಧ್ಯಕ್ಷರ ಪಟ್ಟ ನೀಡದ ಕಾರಣಕ್ಕೆ ಪರ್ಯಾಯ ಸಮ್ಮೇಳನ ಆಯೋಜಿಸುವುದಾಗಿ ಚಿತ್ರದುರ್ಗದ ಅಹಿಂದ ಆರಂಭದಲ್ಲಿ ಹೇಳಿಕೊಂಡಿತ್ತು. ಪರ್ಯಾಯ ಸಮ್ಮೇಳನ ನಡೆದರೆ ಅಸಮಾಧಾನವಿಲ್ಲ ಎಂಬ ಕಸಾಪ ಜಿಲ್ಲಾಧ್ಯಕ್ಷರ ಹೇಳಿಕೆಯೂ ಮತ್ತೊಂದು ಕಾರಣವಾಗಿದೆ.
ಕನ್ನಡದ ನಾಡು-ನುಡಿ- ಜಲದ ವಿಷಯದಲ್ಲಿ ‘ಭರವಸೆ ಕೊಟ್ಟವನು ಈ(ವೀ)ರ ‘ಭದ್ರ’, ಇಸ್ಕೊಂಡವನು ಕೋಡಂಗಿ’ ಎಂಬಂತಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಪಟ್ಟ ಕಟ್ಟಿದ ಕೇಂದ್ರ ಸರಕಾರ ಇದುವರೆಗೂ ಅಕೃತವಾಗಿ ಘೋಷಿಸಿಲ್ಲ. ಇಂತಹುದೇ ಭರವಸೆಯನ್ನು ರಾಜ್ಯ ಸರಕಾರ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನದ ವಿಷಯದಲ್ಲಿ ನೀಡಿದೆ. ಅಡಿಗಲ್ಲು ಕಾರ್ಯಕ್ರಮ ತಿಂಗಳಿಂದ ತಿಂಗಳಿಗೆ ಜಿಗಿಯುತ್ತಿದೆ. ಅದಿರಲಿ, ಅಮೃತ ಸಮ್ಮೇಳನದ ಅದ್ಧೂರಿ ಆಚರಣೆಗೂ ವಿಶೇಷ ನೆರವು ಒದಗಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ, ಸ್ವಾಗತ ಸಮಿತಿ ಅಧ್ಯಕ್ಷ ಜಿ.ಕರುಣಾಕರರೆಡ್ಡಿ ಹೇಳಿದ್ದಾರೆ. ಹಂಪಿ ಉತ್ಸವದಲ್ಲಿ ಹಣದ ಹೊಳೆ ಹರಿಸಿದ ಗಣಿಧಣಿಯ ಮೇಲಂತೂ ಜಿಲ್ಲೆಯ ಜನರು ಅಪಾರ ವಿಶ್ವಾಸ ಹೊಂದಿದ್ದಾರೆ.
ಇಂತಹ ಗಂಭೀರ ಪ್ರಶ್ನೆಗಳ ಸರಮಾಲೆಯನ್ನೇ ಹೆಣೆದುಕೊಂಡು ಸಮ್ಮೇಳನ ಉತ್ತರ ಕಂಡುಕೊಳ್ಳಲು ಕಾಯುತ್ತಿದೆ. ಹಿಂದಿನ ಸಮ್ಮೇಳನದಲ್ಲಿ ಕೈಗೊಂಡು ಕಡತದಲ್ಲಿ ಧೂಳು ತಿನ್ನುತ್ತಿರುವ ನಿರ್ಣಯಗಳು, ರಾಜ್ಯದ ಹಾಗೂ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ, ಜಾಗತಿಕ ಸವಾಲುಗಳಿಗೆ ಈ ಮಹೋತ್ಸವದಲ್ಲಿ ಸಮಾಧಾನ ಪಡೆಯಲೇಬೇಕಿದೆ. ಸಾಹಿತ್ಯದ ಕೆಲಸವೇ ಅದಲ್ಲವೇ ? ಅಂದಹಾಗೆ, ನಿಯೋಜಿತ ಸಮ್ಮೇಳನಾಧ್ಯಕ್ಷ ಡಾ.ಎಲ್.ಬಸವರಾಜು ಅವರು ಸಮ್ಮೇಳನದಲ್ಲಿ ವ್ಯತ್ಯಾಸವಾಗಬೇಕು ;ಬದಲಾವಣೆಯೂ ಇರಲಿ ಎಂದಿದ್ದಾರೆ.
ನಿಜ. ಚಿತ್ರದುರ್ಗ ಬರದನಾಡು. ಆದರೆ, ಇಲ್ಲಿ ಸಾಹಿತ್ಯ, ಇತಿಹಾಸ, ಪರಂಪರೆಗೆ ಬರವಿಲ್ಲ. ಮಠಮಾನ್ಯಗಳು ಜನರಲ್ಲಿ ಜೀವನ ಪ್ರೀತಿ ತುಂಬಿವೆ. ಸ್ವತಃ ಪ್ರಕೃತಿಯೇ ಕಷ್ಟ ಸಹಿಷ್ಣುತೆಯನ್ನು ಬೋಸಿ ಬದುಕುವುದನ್ನೂ ಕಲಿಸಿದೆ. ಎಲ್ಲರ ಮನಸ್ಸಿಗೆ ಕಚಗುಳಿ ಇಡುವ ಪ್ರೇಕ್ಷಣಿಯ ಸ್ಥಳಗಳು ಜಿಲ್ಲಾದ್ಯಂತ ಇವೆ. ಮೂಲ ಸೌಕರ್ಯದ ವಿಷಯದಲ್ಲಿ ಮೂಗು ಮುರಿಯುವ ಕಾಲವೂ ಇನ್ನು ದೂರಾಗಲಿದೆ. ಸದ್ಯ ನಗರವಂತೂ ಶೃಂಗಾರಗೊಂಡು ಸಾಹಿತ್ಯ ಪ್ರೇಮಿಗಳಿಗೆ ಸುಸ್ವಾಗತ ಹೇಳಲು ಸಜ್ಜಾಗತೊಡಗಿದೆ. ಸಮ್ಮೇಳನದಲ್ಲಿ ಉಚಿತ ಭೋಜನದೊಂದಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನೆನಪಿರಲಿ ಮಹಾಜಾತ್ರೆಗೆ ಇನ್ನು ೨೪ ದಿನ ಬಾಕಿ.